ಕೊಪ್ಪಳ, ಮಾ,31 : ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಜಂಪ್ ರೋಪ ಸ್ಪರ್ಧೆಯಲ್ಲಿ ಕರ್ನಾಟಕಕ್ಕೆ 5 ಚಿನ್ನದ ಪದಕ ಹಾಗೂ 7 ಬೆಳ್ಳಿ ಪದಕಗಳನ್ನು ವಿದ್ಯಾರ್ಥಿಗಳು ತಂದುಕೊಟ್ಟಿದ್ದು ಕರ್ನಾಟಕ್ಕೆ ಕೀರ್ತಿ ತಂದಿದ್ದಾರೆ. ಹೌದು! ಉತ್ತರ ಪ್ರದೇಶದ ಆಗ್ರಾದ ಜಾನ್ ಮಿಲ್ಟನ್ ಶಾಲೆಯಲ್ಲಿ ಭಾರತೀಯ ಜಂಪ್ ರೋಪ್ ಫೆಡರೇಶನ್ ವತಿಯಿಂದ ಜರುಗಿದ ಜಂಪ್ ರೋಪ್ 2021-2022 ಸ್ಪರ್ಧೆಯ 16 ಹಾಗೂ 18 ವರ್ಷದೊಳಗಿನ ವಿದ್ಯಾರ್ಥಿಗಳ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದಿಂದ ಬಾಗಲಕೋಟ, ಕಾರವಾರ ಹಾಗೂ ಕೊಪ್ಪಳದ 9 ಸ್ಪರ್ಧಿಗಳು ಭಾಗವಹಿಸಿದ್ದರು, ಮೂರು ದಿನಗಳ ಕಾಲ ಜರುಗಿದ ಸ್ಪರ್ಧೆಯಲ್ಲಿ ಒಟ್ಟು ರಾಜ್ಯದಿಂದ 6 ವಿದ್ಯಾರ್ಥಿನಿಯರು ಹಾಗೂ 3 ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯಕ್ಕೆ 7 ಬೆಳ್ಳಿ ಪದಕ ಹಾಗೂ 5 ಚಿನ್ನದ ಪದಕಗಳನ್ನು ಬಾಚಿಕೊಂಡು ಕೀರ್ತಿತಂದಿದ್ದಾರೆ. ಹಾಗಾಗಿ ಮಂಗಳವಾರ ಸಂಜೆ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವಿಜೇತ ವಿದ್ಯಾರ್ಥಿಗಳನ್ನು ಹಾಗೂ ತರಬೇತಿದಾರರನ್ನು, ಪಾಲಕರು, ಸ್ಕೌಟ್ಸ್ ಹಾಗೂ ಗೈಡ್ಸ್ ಸದಸ್ಯರು, ಶಾಲೆಯ ಶಿಕ್ಷಕರು ಸೇರಿದಂತೆ ಸ್ಥಳೀಯ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾಸಿದರು. ಎಲ್ಲರಿಗೂ ಗುಲಾಬಿ ನೀಡುವುದರ ಜೊತೆಗೆ ಸಹಿಹಂಚಿದರು.
ಈ ಸಂತಸದ ಸಂದರ್ಭದಲ್ಲಿ ತರಬೇತುದಾರ ನಿಂಗಪ್ಪ ಡಿ ಕಂಚಿ ಮಾತ್ನಾಡಿ, ಇದೊಂದು ರಾಜ್ಯಕ್ಕೆ ಸಂತಸದ ವಿಷಯ, ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದರು. ಇನ್ನು ಸ್ಪರ್ಧೆಯಲ್ಲಿ ಭಾಗವಹಿಸಿದ ಕೊಪ್ಪಳದ ಕೇಂದ್ರಿಯ ವಿದ್ಯಾಲಯದ ವಿದ್ಯಾರ್ಥಿಗಳಾದ ಮಲ್ಲೇಶ್ವರ, ತೇಜಸ್ವಿನಿ, ಪ್ರಿಯಾಂಕ, ಇಂಚರ, ಕೀರ್ತಿ, ಅರ್ಪಿತ ಬೆಳ್ಳಿ ಪದಕ ಪಡೆದಿದ್ದರೆ, ಬಾಗಲಕೋಟೆಯ ಮಹಾಂತೇಶ್ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದಿದ್ದಾರೆ. ಇನ್ನು ಉತ್ತರಕನ್ನಡದ ಕಾರವಾರನ ವಿರೇಂದ್ರ ನಾಯಕ ಹಾಗೂ ಬಾಗಲಕೋಟನ ಅಭಿಷೇಕ ರಾಠೋಡ ತಲಾ ಎರಡೆರೆಡು ಚಿನ್ನದ ಪದಕ ಪಡೆದಿದ್ದಾರೆ. ಇವರಿಗೆ ಟೀಮ್ ಮ್ಯಾನೇಜರ್ ರೇಣುಕಾ ಎನ್ನುವವರು ಸಾಥ್ ನೀಡಿದ್ದು ವಿಶೇಷವಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದಕ್ಕೆ ಪ್ರೋತ್ಸಾಹ ಹಾಗೂ ತರಬೇತಿ ಬೇಕಾಗಿದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ಪಟ್ಟಿದ್ದಾರೆ.