ಬೆಂಗಳೂರು,ಜನವರಿ,14 : ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ರೂ. 642.26 ಕೋಟಿ ಮಂಜೂರು ಮಾಡಿದ್ದು, ಇದು ಹಿಂದಿನ ಯಾವುದೇ ಸರ್ಕಾರಗಳಿಗಿಂತ ದೊಡ್ಡ ಪ್ರಮಾಣದ ಅನುದಾನವಾಗಿದೆ. ಇದನ್ನು ರೈತರು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕೆಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರೂ ಆದ ಈರಣ್ಣ ಕಡಾಡಿ ಅವರು ವಿನಂತಿಸಿದ್ದಾರೆ. ಗರಿಷ್ಠ ಅನುದಾನ ನೀಡಿರುವ ಪ್ರಧಾನಿ ಮತ್ತು ಕೇಂದ್ರ ಸಚಿವ ಸಂಪುಟಕ್ಕೆ ಈರಣ್ಣ ಕಡಾಡಿ ಅವರು ಧನ್ಯವಾದ ಸಮರ್ಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದಂತೆ ನೀರು ಭಗವಂತ ಕೊಟ್ಟ ಪ್ರಸಾದ. ಇದನ್ನು ಯಾವುದೇ ಕಾರ್ಖಾನೆಯಲ್ಲಿ ಉತ್ಪಾದನೆ ಮಾಡಲು ಆಗುವುದಿಲ್ಲ. ನೈಸರ್ಗಿಕವಾಗಿ ಸಿಕ್ಕಂತ ಅತ್ಯಮೂಲ್ಯವಾದ ನೀರಿನ ಉಪಯೋಗವನ್ನು ಸರಿಯಾಗಿ ಮಾಡಿಕೊಳ್ಳಬೇಕು ಮತ್ತು ಅಂತರ್ಜಲ ಹೆಚ್ಚು ಮಾಡುವ ದೃಷ್ಟಿಯಿಂದ ನಾವು ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.
ದೇಶಕ್ಕೆ ಅನ್ನ ನೀಡುವಂತಹ ರೈತನಿಗೆ ಬೇಕಾದದ್ದು ಆರೋಗ್ಯಪೂರ್ಣವಾದ ಮಣ್ಣು, ಉತ್ತಮವಾದಹ ನೀರು ಇವೆರಡು ಇದ್ದರೆ ಇಡಿ ಜಗತ್ತಿಗೆ ಅನ್ನ ನೀಡುವ ತಾಕತ್ತು ರೈತ ಕುಲಕ್ಕೆ ಇದೆ. ಅದಕ್ಕೆ ನೀರು ಹೆಚ್ಚುವರಿಯಾಗಿ ಉಪಯೋಗವಾಗಿ, ವೇಸ್ಟ್ ಆಗಿ ಹೋಗಬಾರದು ಅನ್ನುವ ಕಾರಣದಿಂದ ಮತ್ತು ಹೆಚ್ಚು ನೀರು ಬಳಸುವುದರಿಂದ ಉತ್ಪಾದನೆಗೆ ಕುಂಠಿತಕೊಳ್ಳುತ್ತದೆ. ಜಮೀನು ಸವಳು ಜವಳು ಆಗುತ್ತವೆ. ಇವೆಲ್ಲವನ್ನು ಮನಗಂಡು ಕಡಿಮೆ ನೀರಿನಿಂದ ಹೆಚ್ಚು ಬೆಳೆ ತೆಗೆಯುವುದಕ್ಕೆ ಆದ್ಯತೆ ಕೊಡುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಈ ಯೋಜನೆ ಮಾಡಿದೆ. ಇದನ್ನು ರೈತ ಮೋರ್ಚಾ ರಾಜ್ಯ ಅಧ್ಯಕ್ಷನಾಗಿ ನಾನು ಸ್ವಾಗತ ಮಾಡುತ್ತೇನೆ ಎಂದು ಹೇಳಿದ್ದಾರೆ.
“ಪರ್ ಡ್ರಾಪ್ ಮೋರ್ ಕ್ರಾಪ್” ಎನ್ನುವ ಕಲ್ಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಮಗೆ ಕೊಟ್ಟಿದ್ದಾರೆ. ಒಂದೊಂದು ಹನಿ ನೀರಿನಲ್ಲಿಯೂ ಹೆಚ್ಚು ಬೆಳೆ ಬೆಳೆಯುವಂತಹ ಆಲೋಚನೆಯನ್ನು ನಾವೆಲ್ಲರೂ ಜಾರಿಗೆ ತರಬೇಕಾಗಿದೆ. ಪರ್ ಡ್ರಾಪ್ ಮೋರ್ ಕ್ರಾಪ್ ಎನ್ನುವ ಕಲ್ಪನೆಯನ್ನು ಎಲ್ಲರೂ ಕಾರ್ಯಗತ ಮಾಡೋಣ ಎಂದು ಈರಣ್ಣ ಕಡಾಡಿ ಕರೆ ನೀಡಿದ್ದಾರೆ.