ಬೆಂಗಳೂರು,ಜ,5 : ಮೇಕೆದಾಟು ಯೋಜನೆ ವಿಳಂಬಕ್ಕೆ ದಾಖಲೆ ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ನವರ ಪಾದಯಾತ್ರೆ ಮಾಡೋಕು ಮುನ್ನವೇ ರಾಜ್ಯದ ಜನರಿಗೆ ಸತ್ಯದರ್ಶನ ಮಾಡಿಸುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ. ವಿಕಾಸಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮೇಕೆದಾಟು ಯೋಜನೆ ವಿಳಂಬದ ಬಗ್ಗೆ ದಾಖಲೆ ಬಿಡುಗಡೆ ಮೂಲಕ ಸತ್ಯ ದರ್ಶನ ಮಾಡಿಸುತ್ತೇವೆ ಎಂದರು. ಮೇಕೆದಾಟು ಪಾದಯಾತ್ರೆ ಮಾಡಿಯೇ ಸಿದ್ದ ಎಂಬ ರಾಜ್ಯ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿದ್ದಾರೆ. ಪಂಜಾಬ್ ನಲ್ಲಿ ಅವರದ್ದೇ ಸರ್ಕಾರ ಇದೆ. ಅಲ್ಲಿ ಶಾಲಾ ಕಾಲೇಜುಗಳು ಬಂದ್ ಮಾಡಿದ್ದಾರೆ. ಅಮೇರಿಕಾದಲ್ಲೂ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿವೆ. ಕೇವಲ ಪಾದಯಾತ್ರೆ ಮೂಲಕ ಕಾಂಗ್ರೆಸ್ ನವರು ರಾಜಕೀಯ ಮಾಡ್ತಿದ್ದಾರೆ ಎಂದು ಟೀಕಿಸಿದರು.
ಅಧಿಕಾರ ಇದ್ದಾಗ ಏನೂ ಮಾಡದ ಕಾಂಗ್ರೆಸ್, ಈಗ ಅಧಿಕಾರಕ್ಕಾಗಿ ಪಾದಯಾತ್ರೆ ಮಾಡ್ತಿದ್ದಾರೆ. ಅವರ ಕಾಲದಲ್ಲಿ ಏನು ಮಾಡಿದ್ದರು ಎಂದು ಮಾಧ್ಯಮಗಳ ಮುಂದೆ ಇಡಲಿ. ಕೃಷ್ಣೆ ಕಡೆ ಪಾದಯಾತ್ರೆ ಮಾಡಿದ್ರು, ಏನಾಯ್ತು? ಎಂದು ಪ್ರಶ್ನಿಸಿದರು. ಪ್ರಧಾನಿಗಳ ರ್ಯಾಲಿ ಅವಕಾಶ ಇದೆಯಲ್ಲ ಎಂಬ ಕೈ ನಾಯಕರ ಪ್ರಶ್ನೆ ವಿಚಾರಕ್ಕೆ ಮಾತನಾಡಿದ ಕಾರಜೋಳ, ಪ್ರಧಾನಿಗಳ ಕಾರ್ಯಗಳಿಗೆ ಅನುಮತಿ ನೀಡ್ತಾರೆ, ಇಲ್ಲಾ ಎಂಬ ಪ್ರಶ್ನೆ ಅಲ್ಲ. ರಾಜ್ಯದಲ್ಲಿ ಜನರ ಆರೋಗ್ಯ ಕಾಪಾಡೋದಷ್ಟೇ ಪ್ರಶ್ನೆ ಎಂದರು.
ಜನರ ರಕ್ಷಣೆ ಮಾಡುವುದಕ್ಕಾಗಿ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ. ಸರ್ಕಾರ ಯಾವುದೇ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡ್ತಿಲ್ಲ. ಮುಂದೆ ಸಮಯ -ಸಂದರ್ಭ ನೋಡಿಕೊಂಡು ಪಾದಯಾತ್ರೆ ಮಾಡಲಿ ಎಂದು ಸಲಹೆ ನೀಡಿದರು .