ಬೆಂಗಳೂರುರಾಜಕೀಯರಾಜ್ಯ

ಬಿಜೆಪಿ ಸರ್ಕಾರವನ್ನು ಟೀಕಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಅ,10; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳದ ನಿರ್ಧಾರವನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ರಿರುವ ರಾಜ್ಯ ಬಿಜೆಪಿ ಸರ್ಕಾರ, ಈ ಹೆಚ್ಚಳದ ಅನುಷ್ಠಾನದ ಬಗ್ಗೆ ವಿವರ ನೀಡದೆ ಮೌನವಾಗಿದ್ದುಕೊಂಡು ಎಸ್ ಸಿ/ಎಸ್ ಟಿ ಸಮುದಾಯವನ್ನು ತಪ್ಪುದಾರಿಗೆಳೆಯುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಹೇಳಿಕೆ ಬಿಡುಡಗೆ ಮಾಡಿರುವ ಅವರು, ಎಸ್ ಸಿ ಎಸ್ ಟಿ  ಮೀಸಲಾತಿ ಹೆಚ್ಚಿಸಬೇಕೆಂಬ  ಬೇಡಿಕೆ ಹಿನ್ನೆಲೆಯಲ್ಲಿ ನಮ್ಮ  ಸರ್ಕಾರ ನ್ಯಾಯಮೂರ್ತಿ  ನಾಗಮೋಹನ್ ದಾಸ್ ಸಮಿತಿಯನ್ನು ನೇಮಿಸಿತ್ತು. ಸಮಿತಿಯ ಶಿಫಾರಸುಗಳಿಗೆ ಅನುಗುಣವಾಗಿ ಎಸ್ ಸಿ- ಎಸ್ ಟಿ ಮೀಸಲಾತಿಯನ್ನು  ಕ್ರಮವಾಗಿ  ಶೇ.17 ಮತ್ತು ಶೇ.7ಕ್ಕೆ  ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧಾರ  ಕೈಗೊಂಡಿರುವುದು  ಸ್ವಾಗತಾರ್ಹ.  ಈ ಮೀಸಲಾತಿ  ಹೆಚ್ಚಳದ ಅನುಷ್ಠಾನದ ಪ್ರಕ್ರಿಯೆ ದೀರ್ಘವಾದುದು ಮಾತ್ರವಲ್ಲ ಆಳುವ ಪಕ್ಷದ ರಾಜಕೀಯ ಇಚ್ಛಾಶಕ್ತಿಯನ್ನೂ ಅವಲಂಬಿಸಿದೆ ಎಂದಿದ್ದಾರೆ.

ಎಸ್ ಸಿ/ಎಸ್ ಟಿ ಸಮುದಾಯದ  ಮೀಸಲಾತಿ ಹೆಚ್ಚಳವಾಗಬೇಕಾದರೆ  ಮೊದಲು ವಿಧಾನಮಂಡಲ ನಿರ್ಣಯ ಕೈಗೊಂಡು  ಸಂವಿಧಾನದ ತಿದ್ದುಪಡಿಗಾಗಿ  ಕೇಂದ್ರ ಸರ್ಕಾರಕ್ಕೆ ಕಳಿಸಬೇಕಾಗುತ್ತದೆ.  ಕೇಂದ್ರ ಸರ್ಕಾರ ಸಂಸತ್ ನಲ್ಲಿ  ಸಂವಿಧಾನ ತಿದ್ದುಪಡಿ  ಮಸೂದೆಗೆ ಅಂಗೀಕಾರ  ಪಡೆಯಬೇಕು. ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ ನಂತರ ಮೀಸಲಾತಿ ಹೆಚ್ಚಳ ಜಾರಿಯಾಗಲಿದೆ ಎಂದು ಹೇಳಿದ್ದಾರೆ.

ಮೀಸಲಾತಿ ಹೆಚ್ಚಳದ ಈ ಪ್ರಕ್ರಿಯೆ ಸುಲಭದ ಕೆಲಸ ಅಲ್ಲ. ರಾಜ್ಯದಲ್ಲಿ ಈಗ ಹಿಂದುಳಿದ ಜಾತಿಗಳಿಗೆ ಶೇ.32, ಪರಿಶಿಷ್ಟ ಜಾತಿಗಳಿಗೆ ಶೇ.15 ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ.3ರಷ್ಟು ಅಂದರೆ ಒಟ್ಟು ಶೇ.50ರಷ್ಟು ಮೀಸಲಾತಿ ಇದೆ. ಎಸ್ ಸಿ/ಎಸ್ ಟಿ ಮೀಸಲು  ಹೆಚ್ಚಳದಿಂದ ಈ ಪ್ರಮಾಣ  ಶೇ.56ರಷ್ಟು  ಆಗಲಿದೆ. ಸುಪ್ರೀಂ ಕೋರ್ಟ್ (ಇಂದಿರಾ ಸಹಾನಿ ಪ್ರಕರಣದ) ತೀರ್ಪಿನ ಪ್ರಕಾರ ಒಟ್ಟು ಮೀಸಲಾತಿ ಶೇ.ಐವತ್ತನ್ನು ಮೀರುವಂತಿಲ್ಲ.  ಈ ಮಿತಿಯನ್ನು ಮೀರದೆ ಎಸ್ ಸಿ/ಎಸ್ ಟಿ ಮೀಸಲಾತಿಯನ್ನು ಒಟ್ಟು ಶೇ.ಆರರಷ್ಟು ಹೆಚ್ಚಿಸಲು ಹೇಗೆ ಸಾಧ್ಯ? ಇದರ ಬಗ್ಗೆ ತನ್ನ ನಿಲುವನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.

Leave a Reply