ಲಖನೌ: ದೇಶದ ಕೋಟ್ಯಂತರ ಭಕ್ತರ ಆರಾಧ್ಯ ದೈವ ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಪ್ರಕರಣ ದಿನಕ್ಕೊಂದು ಆಘಾತಕಾರಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಭಕ್ತರು ಶ್ರದ್ಧೆಯಿಂದ ನೀಡಿದ ಕಾಣಿಕೆ ಹಣಕ್ಕೆ ಕನ್ನ ಹಾಕಿದ್ದ ಖದೀಮರು, ಆ ಹಣವನ್ನು ಷೇರು ಮಾರುಕಟ್ಟೆ (Share Market) ಹಾಗೂ ಇತರ ಆರ್ಥಿಕ ವ್ಯವಹಾರಗಳಲ್ಲಿ ಹೂಡಿಕೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ತನಿಖೆಯ ವ್ಯಾಪ್ತಿಯನ್ನು ತೀವ್ರಗೊಳಿಸಿದ್ದು, ಕಳ್ಳಾಟದ ರೋಚಕ ಸಂಗತಿಗಳು ಒಂದೊಂದಾಗಿ ಹೊರಬರುತ್ತಿವೆ.
ಕದ್ದ ಹಣದಲ್ಲಿ ಶೇರ್ ಮಾರ್ಕೆಟ್ ಬಿಸಿನೆಸ್!
ಅಯೋಧ್ಯೆ ಪೊಲೀಸರ ತನಿಖೆಯ ವೇಳೆ ಮುಖ್ಯ ಆರೋಪಿಗಳಾದ ಅನುಕಲ್ಪ್ ಮಿಶ್ರಾ ಮತ್ತು ಅವಿನಾಶ್ ಶುಕ್ಲಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ತಾವು ಕದ್ದ ದೇಣಿಗೆ ಹಣವನ್ನು ಕೇವಲ ಬಚ್ಚಿಡದೇ, ಅದರಿಂದ ದುಪ್ಪಟ್ಟು ಲಾಭ ಗಳಿಸುವ ಉದ್ದೇಶದಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಈ ಹಣವನ್ನು ಬೇರೆಯವರಿಗೆ ಬಡ್ಡಿಗೂ ನೀಡುತ್ತಿದ್ದರು ಎಂಬ ಕರಾಳ ಸತ್ಯ ಬಯಲಾಗಿದೆ.
ಹಣದ ಮೂಲ ಮರೆಮಾಚಲು ಮಾಸ್ಟರ್ ಪ್ಲಾನ್!
ಆರೋಪಿಗಳು ಪೊಲೀಸರ ಕಣ್ಣಿಗೆ ಮಣ್ಣೆರಚಲು ತಂತ್ರ ಹೂಡಿದ್ದರು. ಕದ್ದ ಹಣವನ್ನು ನೇರವಾಗಿ ತಮ್ಮ ಖಾತೆಗಳಿಗೆ ಹಾಕಿಕೊಳ್ಳದೆ, ಮೊದಲು ತಮ್ಮ ಆಪ್ತರು ಮತ್ತು ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಿದ್ದರು. ಬಳಿಕ ಅಲ್ಲಿಂದ ತಮಗೆ ಬೇಕಾದಾಗ ಮರಳಿ ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ಹಣದ ಮೂಲ ಯಾರಿಗೂ ತಿಳಿಯದಂತೆ ನಾಟಕವಾಡುತ್ತಿದ್ದರು.
30 ಬ್ಯಾಂಕ್ ಖಾತೆಗಳು ಸ್ಥಗಿತ: ಆರೋಪಿಗಳು ಹಾಗೂ ಅವರ ಸಂಬಂಧಿಕರ ಹೆಸರಲ್ಲಿದ್ದ 30 ಬ್ಯಾಂಕ್ ಖಾತೆಗಳಲ್ಲಿ ಆದಾಯದ ಮೂಲಕ್ಕೆ ಹೊಂದಿಕೆಯಾಗದ ಭಾರಿ ಪ್ರಮಾಣದ ವಹಿವಾಟುಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ತಕ್ಷಣವೇ ಆ ಎಲ್ಲಾ 30 ಖಾತೆಗಳನ್ನು ಫ್ರೀಜ್ (ಸ್ಥಗಿತ) ಮಾಡಿದ್ದಾರೆ. ಜೊತೆಗೆ ಆರೋಪಿಗಳ ಬಳಿಯಿದ್ದ ನಕಲಿ ದೇಣಿಗೆ ರಸೀದಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಣಿಕೆ ವ್ಯವಸ್ಥೆಯ ಲೋಪವನ್ನೇ ಬಂಡವಾಳ ಮಾಡಿಕೊಂಡ್ರು!
ದೇವಸ್ಥಾನದ ದೇಣಿಗೆ ಎಣಿಕೆ ವ್ಯವಸ್ಥೆಯಲ್ಲಿದ್ದ ಸಣ್ಣಪುಟ್ಟ ಲೋಪದೋಷಗಳನ್ನೇ ಆರೋಪಿಗಳು ಬಂಡವಾಳ ಮಾಡಿಕೊಂಡಿದ್ದರು. ಯಾರಿಗೂ ಸಂಶಯ ಬಾರದಂತೆ ಎಣಿಕೆ ನಡೆಯುವಾಗ ಅತ್ಯಂತ ಚಾಣಾಕ್ಷತನದಿಂದ ಸಣ್ಣ ಪ್ರಮಾಣದಲ್ಲಿ ನಗದನ್ನು ಜೇಬಿಗೆ ಇಳಿಸುತ್ತಿದ್ದರು. ಕದ್ದ ತಕ್ಷಣ ಅದನ್ನು ಐಷಾರಾಮಿ ಜೀವನಕ್ಕೆ ಖರ್ಚು ಮಾಡದೆ, ಡಿಜಿಟಲ್ ಪಾವತಿ ಆಪ್ಗಳು ಮತ್ತು ಬ್ರೋಕರೇಜ್ ಖಾತೆಗಳ ಮೂಲಕ ಷೇರು ಮಾರುಕಟ್ಟೆಗೆ ಹರಿಸುತ್ತಿದ್ದರು.
ಮನೆಗಳ ಮೇಲೆ ದಾಳಿ, ತೀವ್ರ ತನಿಖೆ:
ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು, ಕೋರ್ಟ್ ಅನುಮತಿಯೊಂದಿಗೆ ಆರೋಪಿಗಳಾದ ಅನುಕಲ್ಪ್ ಮಿಶ್ರಾ, ಲವ್ಕುಶ್ ಮಿಶ್ರಾ ಮತ್ತು ಕರುಣೇಶ್ ಪಾಂಡೆ ಅವರನ್ನು 40 ಗಂಟೆಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ವಿಧಿ ವಿಜ್ಞಾನ ತಜ್ಞರು (FSL) ಹಾಗೂ ಸ್ವತಂತ್ರ ಸಾಕ್ಷಿದಾರರ ಸಮ್ಮುಖದಲ್ಲಿ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ, ಹೂಡಿಕೆ ದಾಖಲೆಗಳು, ಮೊಬೈಲ್ ಅಪ್ಲಿಕೇಶನ್ಗಳು ಹಾಗೂ ಡಿಜಿಟಲ್ ವಹಿವಾಟಿನ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸದ್ಯ ಪೊಲೀಸರು ಕೇವಲ ಹಣ ವಶಪಡಿಸಿಕೊಳ್ಳುವುದಕ್ಕೆ ಸೀಮಿತವಾಗದೆ, ಹೂಡಿಕೆಯಿಂದ ಬಂದ ಲಾಭ ಎಲ್ಲಿದೆ? ಈ ಲೂಟಿಯಿಂದ ಯಾರಿಗೆಲ್ಲಾ ಲಾಭವಾಗಿದೆ? ಎಂಬುದನ್ನು ಪತ್ತೆ ಹಚ್ಚಲು ಹಣಕಾಸು ತಜ್ಞರ (Financial Experts) ನೆರವು ಪಡೆದಿದ್ದಾರೆ. ತನಿಖೆ ಮುಂದುವರಿದಿದ್ದು, ಇನ್ನು ಹಲವು ಆಸ್ತಿ ಪಾಸ್ತಿಗಳ ವಿವರಗಳು ಹೊರಬರುವ ಸಾಧ್ಯತೆ ಇದೆ.