ಬಳ್ಳಾರಿ : `ಜನರ ಬಳಿಗೆ ಮಹಾನಗರ ಪಾಲಿಕೆ’ಯನ್ನು ಕೊಂಡೊಯ್ಯುವ ಪ್ರಯತ್ನ ನಡೆದಿದೆ ಎಂದು ಬಳ್ಳಾರಿ ಮಹಾನಗರ ಪಾಲಿಕೆ ಯ ಮೇಯರ್ ಪಿ. ಗಾದೆಪ್ಪ ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವ ದಲ್ಲಿ ಮಂಗಳವಾರ ನಡೆದ ವಾಣಿಜ್ಯೋ ದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳ ಕೊಂದುಕೊರತೆ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಅಭಿವೃದ್ಧಿ, ನೈರ್ಮಲ್ಯ - ಆರೋಗ್ಯ ಮತ್ತು ಇನ್ನಿತರೆ ವಿಚಾರಗಳನ್ನು ತರಲು ಸಾರ್ವಜನಿಕರ ಸಹಕಾರ, ಹೊಂದಾಣಿಕೆ, ಸೌಹಾರ್ದತೆ ಮತ್ತು ನಿರಂತರ ಸಂಪರ್ಕಗಳು ಅತ್ಯಗತ್ಯ. ಈ ಕುರಿತು ಸಂಘ - ಸಂಸ್ಥೆಗಳು ಆಸಕ್ತಿ ತೋರಿಸಿದಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿ ಕೆಲ ಜವಾಬ್ದಾರಿಗಳನ್ನು ನಿರ್ವಹಿಸಬಹುದಾಗಿದೆ ಎಂದರು.
ಬಳ್ಳಾರಿ ಮಹಾನಗರ ಪಾಲಿಕೆಗೆ ಇರುವ ಕೆಟ್ಟ ಹೆಸರನ್ನು ಅಳಸಲು ಸಜ್ಜನರು, ಜನ ಸೇವಾ ಆಸಕ್ತರು ಪಾಲ್ಗೊಂಡು `ಮಧ್ಯವರ್ತಿ’ಗಳನ್ನು ಅವಲಂಭಿಸುವುದನ್ನು ನಿಲ್ಲಿಸಬೇಕು. ತಮ್ಮ ಅವಸರಕ್ಕಾಗಿ ಹಣ ನೀಡಿ ಕೆಲಸ ಮಾಡಿಸಿಕೊಳ್ಳುವ ಪದ್ಧತಿ ತಪ್ಪಿದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಬರಲಿದೆ ಎಂದರು.
ಮಹಾನಗರ ಪಾಲಿಕೆಯ ಆಯುಕ್ತರಾದ ಪಿ.ಎಸ್. ಮಂಜುನಾಥ್ ಅವರು, ಎಂವೈಎಂಜಿ ಯೋಜನೆ ಅಡಿಯಲ್ಲಿ ಪಾಲಿಕೆಗೆ 140 ಕೋಟಿ ರು. ಅನುದಾನ ಬಂದಿದ್ದು, 70 ಕೋಟಿ ರು. ಮೊತ್ತದ ಕಾಮಗಾರಿಗಳು ಪ್ರಾರಂಭವಾಗಿವೆ. 39 ವಾರ್ಡ್ಗಳ ಪ್ರಮುಖ ರಸ್ತೆಗಳು ದುರಸ್ತಿ ಆಗಲಿವೆ. 5000 ಹೆಚ್ಚುವರಿ ಬೀದಿ ದೀಪಗಳ ಅಳವಡಿಸುವ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದಲ್ಲಿ ಬೀದಿ ದೀಪಗಳ ಸಮಸ್ಯೆ ಸಂಪೂರ್ಣ ನಿವಾರಣೆ ಆಗಲಿದೆ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಅವರು, ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಭಾಷಣ ಮಾಡಿ, ‘ಎ’ ಮತ್ತು ‘ಬಿ’ ಖಾತೆ ನವೀಕರಣ ಪ್ರಕ್ರಿಯೆ, ಕುಡಿಯುವ ನೀರು, ಒಳಚರಂಡಿ, ಬೀದಿ ದೀಪಗಳ ನಿರ್ವಹಣೆ, `ಚೇಂಬರ್ ಆಫ್ ಕಾಮರ್ಸ್ ರಸ್ತೆ’ ಇಂಡಸ್ಟ್ರಿಯಲ್ ಏರಿಯಾ-01, 02, 03 ಮತ್ತು 04ರ ಕುರಿತು ವಿಷಯ ಪ್ರಸ್ತಾಪಿಸಿದರು.
ಬಳ್ಳಾರಿ ಜಿಲ್ಲಾ ಇಂಡಸ್ಟ್ರಿಯಲ್ ಅಸೋಸಿಯೇಷನ್ ಅಧ್ಯಕ್ಷರಾದ ವಿ. ರಾಮಚಂದ್ರ, ಜಿ. ರಾಘವೇಂದ್ರ ರೆಡ್ಡಿ, ಹ್ಯಾಲೀಸ್ ಬ್ಲೂನ ಕೆ.ಎಂ. ಶಿವಮೂರ್ತಿ, ಎಸ್. ದೊಡ್ಡನಗೌಡ, ಗಣಪಾಲ್ ಐನಾಥರೆಡ್ಡಿ, ಸುಧಾಕರ ಪೈಪ್ಸ್ನ ಅನಂತುಲ ಸುಧಾಕರ್, ಎಸ್.ಪಿ. ವೆಂಕಟೇಶ್, ಶ್ರೀನಿವಾಸರಾವ್ (ವಾಸು), ಅಲಿವೇಲು ಸುರೇಶ್, ಎ. ರಾಜೇಶ್ ಇನ್ನಿತರರು ಚರ್ಚೆಯಲ್ಲಿ ಪಾಲ್ಗೊಂಡು, ಅಭಿವೃದ್ಧಿ ಪರವಾದ ವಿಷಯಗಳನ್ನು ಪ್ರಸ್ತಾಪಿಸಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷರಾದ ಸೊಂತಾ ಗಿರಿಧರ, ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೆಡ್ ಮಲ್ಲಿಕಾರ್ಜುನಗೌಡ, ಖಜಾಂಚಿಗಳಾದ ನಾಗಳ್ಳಿ ರಮೇಶ್, ಮಾಜಿ ಅಧ್ಯಕ್ಷರಾದ ಡಾ. ಡಿ.ಎಲ್. ರಮೇಶ್ ಗೋಪಾಲ್ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರು ವಂದನಾರ್ಪಣೆ ಸಲ್ಲಿಸಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ವಾಣಿಜ್ಯೋದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳ ಪರವಾಗಿ ಮೂಲಭೂತ ಸೌಲಭ್ಯಗಳ ಈಡೇರಿಕೆಗಾಗಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.