ನವದೆಹಲಿ: ಪ್ರಧಾನಿ Narendra Modi ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ “ಫಲಪ್ರದ”ವಾಗಿದ್ದು, 2047ರೊಳಗೆ ಅಭಿವೃದ್ಧಿಶೀಲ ಭಾರತ ನಿರ್ಮಾಣದ ದಿಕ್ಕಿನಲ್ಲಿ ಆಡಳಿತಾತ್ಮಕ ಸುಧಾರಣೆಗಳನ್ನು ಮತ್ತಷ್ಟು ವೇಗಗೊಳಿಸುವ ಕುರಿತು ಮಹತ್ವದ ಚರ್ಚೆ ನಡೆಯಿತು ಎಂದು ಪ್ರಧಾನಿ ತಿಳಿಸಿದ್ದಾರೆ.
ಸುಮಾರು ನಾಲ್ಕೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ‘Ease of Living’ ಹಾಗೂ ‘Ease of Doing Business’ ವಿಸ್ತರಣೆ, ಜನಸಾಮಾನ್ಯರ ಜೀವನಮಟ್ಟ ಸುಧಾರಣೆ ಮತ್ತು ಸರ್ಕಾರದ ಕಾರ್ಯಕ್ಷಮತೆ ಹೆಚ್ಚಿಸುವ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು.
ಸಭೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಮೋದಿ, “ವಿಕಸಿತ ಭಾರತ ಎಂಬ ನಮ್ಮ ಸಾಮೂಹಿಕ ಕನಸನ್ನು ನನಸು ಮಾಡಲು ಅಗತ್ಯವಾದ ಸುಧಾರಣೆಗಳು ಮತ್ತು ಉತ್ತಮ ಆಡಳಿತ ಕ್ರಮಗಳ ಕುರಿತು ಸಚಿವರು ತಮ್ಮ ಅಭಿಪ್ರಾಯ ಹಾಗೂ ಅನುಭವಗಳನ್ನು ಹಂಚಿಕೊಂಡರು” ಎಂದು ಹೇಳಿದರು.
ಸಭೆಯಲ್ಲಿ ಕೇಂದ್ರ ಸಚಿವರು, ಸ್ವತಂತ್ರ ಉಸ್ತುವಾರಿ ರಾಜ್ಯ ಸಚಿವರು ಹಾಗೂ ವಿವಿಧ ಇಲಾಖೆಗಳ ರಾಜ್ಯ ಸಚಿವರು ಭಾಗವಹಿಸಿದ್ದರು. ಇದು 2026ರ ಮೊದಲ ಸಂಪುಟ ಸಭೆಯಾಗಿದ್ದು, ಮುಂದಿನ ಆಡಳಿತ ಕಾರ್ಯಯೋಜನೆಗೆ ದಿಕ್ಕು ತೋರಿದ ಸಭೆಯಾಗಿ ಪರಿಗಣಿಸಲಾಗಿದೆ.
ಮೂಲಗಳ ಪ್ರಕಾರ, 2047ರೊಳಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ರೂಪಿಸುವ ಗುರಿಯತ್ತ ಸರ್ಕಾರ ಕಾರ್ಯನಿರ್ವಹಿಸಬೇಕೆಂದು ಪ್ರಧಾನಿ ಸಚಿವರಿಗೆ ಸೂಚನೆ ನೀಡಿದರು. ಆಡಳಿತವು ಜನರ ಬದುಕು ಸುಲಭಗೊಳಿಸುವತ್ತ ಕೇಂದ್ರೀಕೃತವಾಗಿರಬೇಕು ಎಂದು ಅವರು ಒತ್ತಿಹೇಳಿದರು.
ಸರ್ಕಾರದ ಕಲ್ಯಾಣ ಯೋಜನೆಗಳು ಗರಿಷ್ಠ ಫಲಾನುಭವಿಗಳಿಗೆ ತಲುಪುವಂತೆ ಕಾರ್ಯನಿರ್ವಹಿಸಬೇಕು ಹಾಗೂ ಸಾರ್ವಜನಿಕ ಜೀವನದಲ್ಲಿ ಅನಗತ್ಯ ಹಸ್ತಕ್ಷೇಪ ತಪ್ಪಿಸಬೇಕು ಎಂಬ ಸಂದೇಶವನ್ನೂ ಮೋದಿ ನೀಡಿದರು ಎನ್ನಲಾಗಿದೆ.
“ಹಿಂದಿನ ಸಾಧನೆಗಳಿಗಿಂತ ಭವಿಷ್ಯದ ಗುರಿಗಳತ್ತ ಹೆಚ್ಚಿನ ಗಮನ ಹರಿಸಬೇಕು. ಸರ್ಕಾರಿ ಕಾರ್ಯಗಳಲ್ಲಿ ವಿಳಂಬಕ್ಕೆ ಅವಕಾಶ ಇರಬಾರದು” ಎಂದು ಪ್ರಧಾನಿ ಸಚಿವರಿಗೆ ಸೂಚನೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಸಭೆಯಲ್ಲಿ ವಿದೇಶಾಂಗ ಸಚಿವ S. Jaishankar ಇತ್ತೀಚಿನ ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಹಾಗೂ ಇಟಲಿ ಭೇಟಿಗಳ ಬಗ್ಗೆ ಸಚಿವ ಸಂಪುಟಕ್ಕೆ ಮಾಹಿತಿ ನೀಡಿದರು. ವಿವಿಧ ಸಚಿವಾಲಯಗಳ ಕಾರ್ಯಕ್ಷಮತೆ ಕುರಿತು ಒಂಬತ್ತು ಕಾರ್ಯದರ್ಶಿಗಳು ಪ್ರಸ್ತುತಿಗಳನ್ನೂ ನೀಡಿದರು.
ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿದ ಬಳಿಕ ಹಾಗೂ ಪುದುಚೇರಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಹಿನ್ನೆಲೆ ಈ ಸಭೆ ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿದೆ.