ಬಳ್ಳಾರಿ: ಬಳ್ಳಾರಿ ನಗರದ ಸಾಹಿತ್ಯ ಭವನದಲ್ಲಿ ಭಾನುವಾರ ಬೆಳಗ್ಗೆ ಆಯೋಜನೆಗೊಂಡ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತೊಂದು ಮಹತ್ವದ ಕೃತಿ ಸೇರ್ಪಡೆಗೊಂಡಿತು. ಹಿರಿಯ ಸಾಹಿತಿಗಳು ಸಂಶೋಧಕರೂ ಆಗಿರುವ ಗಂಗಾಧರ ಪತ್ತಾರ ಅವರ“ಕನ್ನಡಕ್ಕೆ ಬೆಳಕಿತ್ತ ಪಶ್ಚಿಮದ ಹಣತೆಗಳು” ಎಂಬ ಕೃತಿಯ ಲೋಕಾರ್ಪಣಾ ಸಮಾರಂಭವು ಸಾಹಿತ್ಯ ಪ್ರೇಮಿಗಳ ಉಪಸ್ಥಿತಿಯಲ್ಲಿ ಅರ್ಥಪೂರ್ಣವಾಗಿ ಜರುಗಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಭೀಮಸೇನ್ ಬಡಿಗೇರ್ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಹುಬ್ಬಳ್ಳಿ ಅವರು ಮಾತನಾಡುತ್ತಾ ಕನ್ನಡ ಭಾಷೆಯ ಇತಿಹಾಸವನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡುವ ಈ ಕೃತಿ, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರಿಗೆ ಮಹತ್ವದ ಆಧಾರ ಗ್ರಂಥವಾಗಲಿದೆ ಎಂದರು.ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಡಾ.ಸಿ.ಬಿ ಚಿಲ್ಕರಾಗಿ ಅವರು ಮಾತನಾಡುತ್ತಾ ಪಾಶ್ಚಾತ್ಯರಿಗಿದ್ದ ಇತಿಹಾಸ ಪ್ರಜ್ಞೆ ಭಾರತೀಯರಲ್ಲಿ ಕಡಿಮೆ .ಅಂಬಳಿ ಕೊಂಬಳಿ ಈ ಸ್ಥಳಗಳು ಕರ್ನಾಟಕ ಸಂಸ್ಕೃತಿಯ ಅಸ್ಮಿತಿಗಳಾಗಿವೆ ಎಂದರು.
ಶ್ರೀ ಕೆ.ಬಿ. ಸಿದ್ಧಲಿಂಗಪ್ಪ, ವಿಶ್ರಾಂತ ಶಿಕ್ಷಕರು ಹಾಗೂ ಲೇಖಕರು ಇವರು ಕೃತಿಯನ್ನು ಪರಿಚಯಿಸುತ್ತಾ. ಈ ಕೃತಿ ತುಂಬಾ ಮೌಲಿಕವಾದ್ದು ಇಲ್ಲಿ ಹದಿನಾರು ಜನ ಪಾಶ್ಚಾತ್ಯ ವಿದ್ವಾಂಸರ ಕೊಡುಗೆಯನ್ನು ಲೇಖಕರು ತುಂಬಾ ಮಹತ್ವ ಪೂರ್ಣ ಮಾಹಿತಿಯನ್ನು ಕಟ್ಟಿಕೊಟ್ಟಿದ್ದಾರೆ. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಪಶ್ಚಿಮದ ವಿದ್ವಾಂಸರ ಕೊಡುಗೆಗಳ ಇತಿಹಾಸವನ್ನು ಸಂಶೋಧನಾತ್ಮಕವಾಗಿ ಈ ಕೃತಿ ದಾಖಲಿಸಿರುವುದು ಗಮನಾರ್ಹವಾಗಿದೆ ಎಂದು ಅಭಿಪ್ರಾಯಪಟ್ಟರು.
ಕೃತಿಯ ಕುರಿತಾಗಿ ವಿಮರ್ಶಾತ್ಮಕ ಅಭಿಪ್ರಾಯವನ್ನು ಡಾ. ಪರಸಪ್ಪ ಬಂದ್ರಕಳ್ಳಿ, ವೈದ್ಯಕೀಯ ನಿರ್ದೇಶಕರು (ನೇತ್ರಭಂಡಾರ, BMCRS, ಬಳ್ಳಾರಿ) ವ್ಯಕ್ತಪಡಿಸಿದರು. ಕನ್ನಡ ಭಾಷೆ, ಲಿಪಿ, ಮುದ್ರಣ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಪಶ್ಚಿಮದ ಪ್ರಭಾವವನ್ನು ಸಮತೋಲನದ ದೃಷ್ಟಿಯಿಂದ ದಾಖಲಿಸಿರುವ ಕೃತಿ ಇದಾಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಚಂದ್ರಕಾಂತ ಸೋನಾರ್, ಅಧ್ಯಕ್ಷರು – ವಿಶ್ವಕರ್ಮ ವಿಕಾಸ ವೇದಿಕೆ (ಬಳ್ಳಾರಿ), ಡಾ. ಬಿ.ಜಿ. ಕಲಾವತಿ, ಮುಖ್ಯಸ್ಥರು – ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಮೊಕಾ) ಹಾಗೂ ಶ್ರೀ ಕೃಷ್ಣರಾವ್ ರಂ. ಕುಲಕರ್ಣಿ, ವಿಶ್ರಾಂತ ಪ್ರಾಚಾರ್ಯರು, ವಿದ್ಯಾನಂದ ಗುರುಕುಲ ಕಾಲೇಜು (ಕುಕನೂರು) ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರು ಹಾಗೂ ಕ ಸಾ.ಪ ಗೌರದ ಕಾರ್ಯದರ್ಶಿಗಳಾದ ಡಾ.ಶಿವಲಿಂಗಪ್ಪ ಹಂದ್ಯಾಳ್ ವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಸುಧಾ ಮಂಜುನಾಥ್, ಸಂಗೀತ ವಿದುಷಿ (ಬಳ್ಳಾರಿ) ಅವರ ಪ್ರಾರ್ಥನೆಯು ಸಾಹಿತ್ಯಿಕ ವಾತಾವರಣವನ್ನು ಸೃಷ್ಟಿಸಿತು. ಡಾ ಎಸ್ ಮಂಜುನಾಥ ಇವರು ಅಥಿತಿ ಗಳನ್ನು ಸ್ವಾಗತಿಸಿದರೆ ಲೇಖಕರಾದ ಟಿ.ಕೆ ಗಂಗಾಧರ ಪತ್ತಾರ್ ಅವರು ಪ್ರಾಸ್ತಾವಿಕ ನುಡಿಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸಮಾರಂಭದ ಕೊನೆಯಲ್ಲಿ ಡಾ.ಸಿದ್ದೇಶ್ವರಿ ಶಿಕ್ಷಕರು ವಂದನಾರ್ಪಣೆ ಸಲ್ಲಿಸಿದರು.ಈ ಸಮಾರಂಭದಲ್ಲಿ ಪತ್ತಾರ ಅವರ ಕುಟುಂಬದ ಸದಸ್ಯರು ಅವರ ಅಭಿಮಾನಿಗಳು ಸಾಹಿತ್ಯ ಆಸಕ್ತರು ಭಾಗವಹಿಸಿದ್ದರು.