ಬಳ್ಳಾರಿ: ಕರ್ನಾಟಕದ ಪುರಾತತ್ವ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡು ವಂತಹ ರೋಚಕ ಸತ್ಯವೊಂದು ಈಗ ವೈಜ್ಞಾನಿಕವಾಗಿ ಅನಾವರಣಗೊಂಡಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ಅರಣ್ಯದ ಗರ್ಭದಲ್ಲಿರುವ ‘ರಶೀದ್ ಪಡಿ’ ಗುಹೆಯು ಭಾರತದಲ್ಲೇ ಅತ್ಯಂತ ಎತ್ತರದ ಪ್ರದೇಶದಲ್ಲಿರುವ ಆದಿಮಾನವನ ವಾಸಸ್ಥಾನ ಎಂಬುದು ಕಾರ್ಬನ್ ಡೇಟಿಂಗ್ ಪರೀಕ್ಷೆಯಿಂದ ಸಾಬೀತಾಗಿದೆ. ಈ ಮೂಲಕ ಜಾಗತಿಕ ಇತಿಹಾಸ ತಜ್ಞರ ಗಮನ ಈಗ ಸಂಡೂರಿನತ್ತ ನೆಟ್ಟಿದೆ. ಅಹಮದಾಬಾದ್ನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ (Pಖಐ) ಮತ್ತು ಐಐಟಿ ಗಾಂಧಿನಗರದ ಪುರಾತತ್ವ ವಿಜ್ಞಾನ ಕೇಂದ್ರ ಜಂಟಿಯಾಗಿ ನಡೆಸಿದ ವೈಜ್ಞಾನಿಕ ಸಂಶೋಧನೆಯ ವರದಿಯಲ್ಲಿ ಈ ಮಹತ್ವದ ರಹಸ್ಯ ಬಹಿರಂಗವಾಗಿದೆ.
10ಸಾವಿರ ವರ್ಷಗಳ ಹಿಂದಿನ ಆಶ್ರಯ ತಾಣ!
ಸಮುದ್ರ ಮಟ್ಟದಿಂದ ಬರೋಬ್ಬರಿ 850 ಮೀಟರ್ ಎತ್ತರದಲ್ಲಿರುವ ಈ ಗುಹೆಯಲ್ಲಿ ಇಂದಿಗೆ ಸುಮಾರು 10,000 ವರ್ಷಗಳ ಹಿಂದೆ (ಮಧ್ಯ ಶಿಲಾಯುಗ) ಆದಿಮಾನವರು ವಾಸಿಸುತ್ತಿದ್ದರು ಎಂದು ಸಂಶೋಧನೆಗಳು ದೃಢಪಡಿಸಿವೆ. ಈ ಗುಹೆಯ ನೆಲಭಾಗದಲ್ಲಿ ದೊರೆತ ಅತ್ಯಂತ ಸೂಕ್ಷ್ಮ ಕಲ್ಲಿನ ಉಪಕರಣ (ಮೈಕ್ರೋಲಿಥ್) ಹಾಗೂ ಮಾನವ ಮೂಳೆಯ ತುಣುಕನ್ನು ಕಾರ್ಬನ್ ಡೇಟಿಂಗ್ ಪ್ರಕ್ರಿಯೆಗೆ ಒಳಪಡಿಸಿದಾಗ ಈ ಬೆಚ್ಚಿಬೀಳಿಸುವ ಇತಿಹಾಸ ಬೆಳಕಿಗೆ ಬಂದಿದೆ.
ಆದಿಮಾನವ ಇಲ್ಲಿಗೇಕೆ ಬಂದಿದ್ದ?
ಹಸಿರು ಕಾನನದಲ್ಲಿ ಪ್ರಾಣಿ ಬೇಟೆಯಾಡಲು, ಸೂಕ್ತ ಆಹಾರದ ಹುಡುಕಾಟಕ್ಕೆ, ಕಲ್ಲಿನ ಆಯುಧಗಳನ್ನು ತಯಾರಿಸಲು ಬೇಕಾದ ವಿಶಿಷ್ಟ ಬಂಡೆಗಳ ಲಭ್ಯತೆ ಹಾಗೂ ಕಾಡುಮೃಗಗಳಿಂದ ರಕ್ಷಣೆ ಪಡೆಯಲು ಸುರಕ್ಷಿತ ಆಶ್ರಯದ ತಲಾಷೆಯಲ್ಲಿದ್ದ ಆದಿಮಾನವನಿಗೆ ಸಂಡೂರಿನ ಸರಣಿ ಬೆಟ್ಟಗಳೇ ಸ್ವರ್ಗವಾಗಿದ್ದವು ಎಂಬುದಕ್ಕೆ ಈ ಸಂಶೋಧನೆ ಸಾಕ್ಷ್ಯ ಒದಗಿಸಿದೆ.
ಇನ್ನಷ್ಟು ರಹಸ್ಯಗಳು ಹೊರಬರಬೇಕಿದೆ...
ಗುಹೆಯಲ್ಲಿ ಪತ್ತೆಯಾಗಿರುವ ಸಾಕು ಹಾಗೂ ಕಾಡು ಪ್ರಾಣಿಗಳ ಮೂಳೆ ಮತ್ತು ಹಲ್ಲುಗಳ ಮೇಲೂ ಸದ್ಯ ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಯುತ್ತಿದೆ. ಈ ವರದಿಗಳು ಹೊರಬಂದರೆ ಅಂದಿನ ಕಾಲದ ಪರಿಸರ, ಪ್ರಾಣಿ ಸಂಕುಲ ಹಾಗೂ ಮನುಷ್ಯನ ಆಹಾರ ಪದ್ಧತಿಯ ಬಗ್ಗೆ ಮತ್ತಷ್ಟು ರೋಮಾಂಚಕ ಮಾಹಿತಿಗಳು ದೊರೆಯಲಿವೆ. ಹಂಪಿ, ಸಂಗನಕಲ್ಲು ಮತ್ತು ಹಿರೇಬೆಣಕಲ್ ಸಾಲಿಗೆ ಈಗ ಸಂಡೂರಿನ ‘ರಶೀದ್ ಪಡಿ’ ಸೇರ್ಪಡೆಯಾಗುತ್ತಿದ್ದು, ಕರ್ನಾಟಕ ಪ್ರವಾಸೋದ್ಯಮ ಮತ್ತು ಜಾಗತಿಕ ಪುರಾತತ್ವ ನಕ್ಷೆಯಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ.